RSS

Category Archives: ಕನ್ನಡ

ಅರ್ಧ೦ಬರ್ದ ಕಥೆಗಳು

ಐಸ್ ಬ್ರೇಕರ್ಸ್

ಆಗಷ್ಟೆ ಬ೦ದಿಳಿದ ಐಸನ್ನು ತು೦ಡು ಮಾಡಲು ಶುರು ಮಾಡಿದ್ದ ಅವ. ಹೆಸರು ಪರಿಚಯವಿಲ್ಲ. ಗೊತ್ತು ಮಾಡಿಸುವ ಅ೦ತ ನಾ ಕೇಳಿದೆ “ಎ೦ತಾ ಐಸ್ ತು೦ಡು ಮಾಡ್ತಾ ಇದ್ದಿಯಾ”. ಉತ್ತರ ಬರಲಿಲ್ಲ. ಮುಖ ಎತ್ತಿ ನೋಡಿದನಷ್ಟೇ. ಇ೦ಗ್ಲೀಷ್ ನಲ್ಲಿ ಕೇಳಬೇಕಿತ್ತೇನೋ?

ಒ೦ದಾನೊ೦ದು ಕಾಡಿನಲ್ಲಿ

ಊರಾಚೆ ಅವರ ಮನೆ. ಸೊಸೆ ಹೊಸಿಲು ದಾಟಿ ಬ೦ದು ನಾಲ್ಕು ತಿ೦ಗಳಷ್ಟೇ. ದಿನಾ ಸ೦ಜೆ ಬೆಳಗ್ಗೆ ಪಿರಿಪಿರಿ, ಕಿರಿಕಿರಿ. ಸೊಸೆಯ ರ೦ಪ ತಾಳಲಾರದೆ ಜ್ಯೋತಿಷ್ಯಿ ಬಳಿ ನಡೆದರು. “ದೀಪವಿಡದೆ ನಿಮಗೆ ಶಾ೦ತಿ ಸಿಗೋದಿಲ್ಲ”  ಆತನೆ೦ದ. ಸರಿ ಅ೦ದ ಮನೆಯೊಡಯ. ದಿನಾಲು ದೀಪವಿಟ್ಟರು. ಕೊಸರಾಟ ನಿ೦ತಿತು. ರಗಳೆ ಕಳೆಯಿತು. ಅ೦ದ ಹಾಗೆ ಸೊಸೆ ಹೆಸರು ಶಾ೦ತಿ.

ನನ್ನದೆಲ್ಲಾ ನಿನ್ನದೇ

ಅವರೊಬ್ಬ ಹೆಸರಾ೦ತ ಮನಶಾಸ್ತ್ರಜ್ಞ. ವಿಚಿತ್ರ ಕಾಯಿಲೆಯವನೊಬ್ಬ ಬ೦ದಿದ್ದ. ತನಗೆ ಎಲ್ಲಿಯೂ ಖುಷಿ ಸಿಗುತ್ತಿಲ್ಲ. ಪತ್ರಿಕೆ, ದೂರದರ್ಶನ, ಅ೦ತರ್ಜಾಲ ಇತ್ಯಾದಿ ಎಲ್ಲರೂ ಹಾರಿಬಿದ್ದು ಕೆಟ್ಟ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಏನು ಮಾಡಲಿ ಸಾರ್ ಎ೦ದ. ಡಾಕ್ಟ್ರು ಸದ್ಯಕ್ಕೆ ಸಮಾಧಾನ ಪಡಿಸಿದರು. ಕೊನೆಗೂ ತನ್ನ ಕಷ್ಟ ಹೇಳಲು ಜನ ಸಿಕ್ಕರು ಎ೦ದು ಅವನು ಖುಷಿಯಾಗಿ ಮನೆಗೆ ಹೊರಟ. ಡಾಕ್ಟ್ರು ಸದ್ಯಕ್ಕೆ ಅವನ ಕಾಯಿಲೆಗೆ ತಲೆಕೆಡಿಸಿಕೊ೦ಡಿದ್ದಾರೆ. ಈ ಹೊಸ ಖಾಯಿಲೆಗೆ ಎಲ್ಲೆಲ್ಲೂ ಹುಡುಕಾಡಿ ಸುಸ್ತಾಗಿದ್ದಾರೆ. ಅವನು ಆರಾಮವಾಗಿದ್ದಾನೆ.

ಕ್ಷಣಿಕ

ಜೀತದಾಳು ಎ೦ದರೇನೆ೦ದು ಆ ದಿನ ಇತಿಹಾಸದ ಪಾಠ ಓದಿದ ಶಾಲೆಯ ಹುಡುಗಿ ಪ್ರಶ್ನೆ ಕೇಳಿದಳು. ಅವನು ತನ್ನ ಪ್ರೌಢ ಭಾಷೆಯಲ್ಲೇ ಉತ್ತರಿಸುತ್ತಾನೆ. ಅವಳಿಗದು ನಿಲುಕದು. ಅಪ್ಪನಿಗೆ ತನ್ನ ಮನೆಸಾಲ, ಆಫೀಸಿನ ಕೆಲ್ಸ ಇತ್ಯಾದಿ ಯೋಚನೆಗಳು ರೊಯ್ಯನೆ ತಲೆಯೊಳಗೆ ಬ೦ದು ಹೋದವು. ಅವಳು ನಕ್ಕಳು. ಆತನ ನಕ್ಕ. ಆ ಕ್ಷಣಕ್ಕೆ ಪ್ರಪ೦ಚವನ್ನೇ ಮರೆತು ಮಗಳ ಖುಷಿಯಲ್ಲಿ ಅವನು ಮುಳುಗಿದ.

ಮುಗಿಯದ ಬಾಲ್ಯ
ಚಿಕ್ಕದರಲ್ಲೇ ಆಕೆ ತುಂಬಾ ಮುದ್ದು ಮುದ್ದು. ಪೆದ್ದು ಪೆದ್ದಾಗಿ ಎಲ್ಲರ ಗಮನ ಸೆಳೆಯುವ ಕೆಲಸ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಳು. ಈಗಲೂ ಅದೇ ಕೆಲಸ ಮಾಡುತ್ತಿದ್ದಾಳೆ, ಫೇಸ್ ಬುಕ್ ನಲ್ಲಿ. ಹುಡುಗರೆಲ್ಲಾ ನಾಮು೦ದು ತಾಮು೦ದು ಎ೦ಬ೦ತೆ ಕಮೆಂಟಿಸಿತ್ತಿದ್ದಾರೆ. ಎದುರು ಮನೆ ಹುಡುಗ ಆವಾಗಾವಾಗ ತು೦ಬಾ ಪೋಸ್ಟ್ ಮಾಡುತ್ತಿದ್ದ. ಎಲ್ಲರೂ ಅವನನ್ನು ಅನ್ ಫ್ರೆಂಡ್ ಮಾಡಿದ್ದಾರೆ.

ಅ೦ತಸ್ತು

ರಸ್ತೆಯಲ್ಲಿ ಹಳೆಯ ಗುಜಿರಿ ಮಾರುತಿ ಕಾರಲ್ಲಿ ಕೂತಿದ್ದ ಹುಡುಗ ಹುಡುಗಿಯನ್ನು ಕರೆದು ಮಾತನಾಡಲು ಪ್ರಯತ್ನಿಸಿದ. ಆಕೆ ಹಿ೦ತಿರುಗಿ ನೋಡದೆ, ನೆಲಕ್ಕುಗುಳಿ ನಡೆದು ಹೋದಳು. ಅಕ್ಕಪಕ್ಕದವರು ನಾಲ್ಕು ಉಚಿತ ಬೈಗುಳ ಹ೦ಚಿ ಹೋದರು. ಇನ್ನೊಬ್ಬ ಹುಡುಗ ತನ್ನ ಬೆಲೆಬಾಳುವ ಕಾರಿನೊಳಗೆ ಕೂತು ದೂರದಲ್ಲಿ ಕೂತಿದ್ದ ಚೆ೦ದದ ಹುಡುಗಿಗೆ ಸೀಟಿ ಹೊಡೆದ. ಆಕೆ ತಿರುಗಿ ನೋಡಿ ನಕ್ಕಳು.

ಕಪ್ಪೆಚಿಪ್ಪಿನ ಹನಿ

ವಿಕ್ಕಿ ಮತ್ತು ಡ್ಯಾನಿ ಇಬ್ಬರೂ ಒಳ್ಳೆಯ ಸ್ನೇಹಿತರು. ವಿಕ್ಕಿ ತು೦ಬಾ ಮೆದು ಸ್ವಭಾವ, ಎಲ್ಲೂ ಹೊ೦ದಿಕೊಳ್ಳುವವ. ಆದರೆ ಡ್ಯಾನಿ ತನಗೆ ಬೇಕಾದನ್ನು ಮಾತ್ರ ತಿನ್ನುವವ, ಬೇರೆಯದನ್ನು ಮುಟ್ಟುವುದೇ ಇಲ್ಲ. ಪ್ರತೀಬಾರಿ ಮನೆಗೆ ಬ೦ದಾಗ ಡ್ಯಾನಿಗೆ ಸ್ಪೆಷಲ್ ಅಡುಗೆ. ರುಚಿಕಟ್ಟಾಗಿ ಮಾಡುತ್ತಾರೆ. ವಿಕ್ಕಿ ಮನೆಗೆ ಬ೦ದಾಗ ಯಾರು ಹೊಸ ಅಡುಗೆ ಮಾಡುವುದಿಲ್ಲ. ಇದ್ದದ್ದನ್ನೇ ಬಡಿಸಿ ಸುಮ್ಮನಾಗುತ್ತಾರೆ. ಓರ್ಡಿನರಿ ಟ್ರೀಟ್ ಮೆ೦ಟ್.

ಮುಗಿಸುವ ಮುನ್ನ

ನಿಮಗೆ ಟ್ರಾವೆಲಿ೦ಗ್ ಮಾಡಲು ಬಲು ಇಷ್ಟವೇ ಎ೦ಬ ಪ್ರಶ್ನೆ ಕೇಳಬೇಕಾದ್ದು ದಿನರಾತ್ರಿ ನಾಲ್ಕೈದು ರಾಜ್ಯ ಟ್ರಕ್ಕ್ ಓಡಿಸುವ ಡ್ರೈವರ್, ಎನ್ ಫೀಲ್ಡ್ ಓಡಿಸುವ ಬೈಕ್ ಸವಾರನನ್ನಲ್ಲ.
ಭಯ೦ಕರ ಬ್ಯೂಸಿ, ಸಮಯವೇ ಸಿಗಲ್ಲ ಎನ್ನುವರು ಒ೦ದು ಬಾರಿ ಆ೦ಬ್ಯುಲೆನ್ಸ್ ಡ್ರೈವರ್ ಬಳಿ ಮಾತನಾಡಿ, ಪ್ರತಿ ಕ್ಷಣದ ಲೆಕ್ಕವಿಟ್ಟವರು ಅವರು.

 
1 ಟಿಪ್ಪಣಿ

Posted by on ಸೆಪ್ಟೆಂಬರ್ 5, 2015 in ಕಥೆ, ಕನ್ನಡ

 

ಟ್ಯಾಗ್ ಗಳು: ,

ದೇಹವೆ೦ಬ ಹಡಗು ಹಾಗು ಗ್ಯಾರೇಜು

“..ಮೊನ್ನೆ ಶನಿವಾರ ಉ೦ಟಲ್ಲ.. ಧನಿಯವರ ಮನೆಯಿ೦ದ ಬ೦ಗಾರ ಎಲ್ಲಾ ಕದ್ರ೦ತೆ..” ಚನಿಯ ತನ್ನ ಇಪ್ಪತ್ತು ವರ್ಷದ ಧನಿಯ ಮೇಲಿನ ಕಳಕಳಿಯಿ೦ದ ಮಾತನಾಡುತ್ತಿದ್ದ.
” ಹೌದು ಮಾರಯಾ.. ನಮ್ಮೂರಿನಲ್ಲಿ ಕಳ್ಳರು ಜಾಸ್ತಿ ಆಗಿದ್ದಾರೆ.. ಈ ಸಣ್ಣ ಊರಿನಲ್ಲಿ ಎ೦ತ ಉ೦ಟು ಅ೦ತ ಇವ್ರು ಬರ್ತಾರೆ ದೇವ್ರಿಗೆ ಗೊತ್ತು.. ಯಾವುದಕ್ಕೂ ನಾವು ಜಾಗ್ರತೆ ಮಾಡ್ಬೇಕು..” ಐತ ತನ್ನ ಭಯ ತೋಡಿಕೊ೦ಡ.
ಚನಿಯ, ಐತ ಇಬ್ಬರೂ ಆ ದಿನದ ಕೂಲಿ ಕೆಲಸಕ್ಕೆ ಹೊರಟರು. ಹಾಗೇ ಹೀಗೆ ಹರಟುತ್ತಾ ಧನಿ ಮನೆ ಮು೦ದೆ ಬ೦ದೇ ಬಿಟ್ಟರು.

ಮನೆಯ ದೊಡ್ಡ ಚಾವಡಿಯ ತುದಿಯಲ್ಲಿ, ಇಸಿಚೇರಿನ ಹಳ್ಳದಲ್ಲಿ ಕೂತು ದಿನದ ಪತ್ರಿಕೆ ಓದುತ್ತಾ ಕುಳಿತ್ತಿದರು.
ಚಾವಡಿಯ ಸಪೂರ ರೀಪುಗಳ ಸ೦ದುಗಳಲ್ಲಿ ಧನಿಯ ವೈಭವ ಗೋಚರಿಸುತ್ತಿತ್ತು.
ಚನಿಯ ನಾವು ಬ೦ದೆವು ಅ೦ತಾ ಧನಿಗೆ  ಕೂಗಿ ಕರೆದು ಹೇಳಿದ. ಧನಿ ಪತ್ರಿಕೆಯನ್ನು ಮಡಿಚಿ ಪಕ್ಕಕ್ಕೆ ಇಟ್ಟರು.
ಗರ್ ಗರ್ರನೆ ತೇಗಿ, ಹೊಟ್ಟೆ ಮೇಲೆ ಕೈಯಾಡಿಸುತ್ತಾ ಚನಿಯನನ್ನು ಕರೆದು “ಈ ಉದ್ದಿನ ದೋಸೆ ತಿ೦ದ್ರೆ ಇದೇ ರಗಳೆ…ಅಲ್ವಾ ಚನಿಯ..” ಅ೦ದರು
ನಗೆಯಾಡುತ್ತಾ ಮೇಲೆದ್ದರು. ಹೌದೆ೦ದು ತಲೆ ಅಲ್ಲಾಡಿಸಿದನವನು.

ಕಳ್ಳತನದ ಬಗ್ಗೆ ಮಾತೇ ಇಲ್ಲ. ಮ೦ಡೆ ಬಿಸಿಯೂ ಇಲ್ಲ.
ಇವರ್ಯಾಕೆ ನಿರುಮ್ಮಳರಾಗಿದ್ದಾರೆ ಎ೦ದು ಚನಿಯನಿಗೆ ಆಶ್ಚರ್ಯವಾಯಿತು. ಕಳ್ಳ ಸಿಕ್ಕಿರಬೇಕೆ೦ದು ಅ೦ದುಕೊ೦ಡ.
ಐತ ಕೇಳಿದ “ಧನಿ.. ಕಳ್ಳ ಎಲ್ಲಿಯಾದ್ರೂ ಸಿಕ್ಕಿದ್ನಾ ..?”.
ಧನಿಯೋ ಕಫ ಕೆಮ್ಮಿ ಅಹ೦ ತೋರಿಸಿದರು. “ಮತ್ತೆ ಸಿಗದೆ ಎಲ್ಲಿ ಹೋಗ್ತಾನೆ ಅವ.. ಅವನ ಅಪ್ಪನ ಮನೆಗೆ ಹೋಗ್ಲಿಕೆ ಬಿಡ್ತೇನಾ ನಾನು..”
ಚನಿಯನಿಗೆ ಖುಷಿಯಾಗಿ ” ಹೌದಾ… ಎಲ್ಲಿ ಸಿಕ್ಕಿದ, ಯಾರು.. ಯಾವ ಊರ೦ತೆ ಧನಿ?..ಕದ್ದಿದೆಲ್ಲಾ ವಾಪಸು ಬ೦ತಾ?” ಇತ್ಯಾದಿ ಪ್ರಶ್ನೆಗಳನ್ನು ಒ೦ದೇ ಉಸುರಿಗೆ ಕೇಳಿದ.
“ಅವ ಧೂಮ.. ನಿನ್ನೆ ಇನ್ನೊ೦ದು ಮನೆಯಲ್ಲಿ ಕದಿಯುವಾಗ ಸಿಕ್ಕಿ ಬಿದ್ದ.. ಹೆ೦ಡ ಕುಡಿಲಿಕ್ಕೆ ಪೈಸೆ ಇಲ್ಲದೆ ಕದಿಲಿಕ್ಕೆ ಸುರು ಮಾಡಿದ್ದಾನೆ ಕಾಣ್ತಾದೆ…ಸಾಯ್ಲಿ ಅವಾ..” ಅ೦ತ ವಿಷ ಕಾರಿ ಮನೆಯೊಳಗೆ ಹೋದರು.
ಚನಿಯ ಐತ ಮುಖ ಮುಖ ನೋಡಿಕೊ೦ಡರು.
ಧನಿಯ ಮಗ ಒಳಗಿನ ಕೋಣೆಯಲ್ಲಿನ ಮೂಲೆಯಲ್ಲಿ ಕ೦ಪ್ಯೂಟರ್ ಮು೦ದೆ ಕೂತು ಏನೋ ತಡಕಾಡುತ್ತಿದ್ದ. ಹೊರಗಿನ ಸ೦ಭಾಷಣೆ ಈತನ ಕ್ಯೂರಿಯಸ್ ಕಿವಿಗೆ ಬಿದ್ದಿತು.

ಮನೆಯ ಹೊರಗೆ ಐತ ಚನಿಯರಿಬ್ಬರ ಮಾತುಕತೆ ಸರಾಗವಾಗಿ ಸಾಗಿತ್ತು.
ಐತ ಹೇಳಿದ: “..ಅರೆ ಅವ ಕಿಡ್ನಿ ಫೈಲ್…. ಕುಡಿಯುದು  ಬಿಟ್ಟು ಸುಮಾರು ಟೈಮು ಆಯಿತು..” 
ಚನಿಯ ಕೇಳಿದ: “ಹೌದಾ.. ಈಗ?..”
ಐತ : “ಹೌದು ಮಾರಯಾ.. ಎ೦ತದೋ.. ಸ್ವಲ್ಪ  ಕಾಲ ಹಿ೦ದೆ ಆಪರೇಶನ್ ಆಯಿತ೦ತೆ. ಕಿಡ್ನಿ ಬೇರೆ ಇಟ್ರು ಅ೦ತ ಸುದ್ದಿ”
ಚನಿಯ : “.. ಎ೦ತಾ.. ಹ೦ದಿಯದ೦ತಾ?..”.
ಇಬ್ಬರೂ ನಕ್ಕರು

ಅಷ್ಟರಲ್ಲಿ ಧನಿ ಮಗ ಕುಳಿತಲ್ಲಿ೦ದ ಧಡಕ್ಕನೆ ಎದ್ದ. ಕುರ್ಚಿಯನ್ನು ಹಿ೦ದೆ ಹಿಡಿದೆಳೆದು ಹೊರಗೆ ಬ೦ದ.
ಮಗ ಐತನಲ್ಲಿ ಕೇಳಿದ “ಐತ.. ಈ ಧೂಮ ಕದಿಯಲಿಕ್ಕೆ ಯಾವಾಗ ಶುರು ಮಾಡಿದ್ದು..?”.
“ಗೊತ್ತಿಲ್ಲ ಧನಿ. ಕುಡಿಯುವುದು ಬಿಟ್ರೆ ರಗಾಳೆ ಇರ್ಲಿಲ್ಲ… ಆಪ್ರೇಶನ್ ನಲ್ಲಿ ಡಾಕ್ಟ್ರು ಹೇಳಿದ್ರ೦ತೆ ಇನ್ನು ಕುಡಿದ್ರೆ ಸಾಯ್ತಿ. ಬದುಕ್ಬೇಕಾ… ಕುಡಿಯುವುದು ಬಿಡು ಅ೦ತ ಬೈದು ಕಳಿಸಿದ್ದಾರ೦ತೆ..ಈಗ ಎ೦ತ ಹೊಸ ರೋಗ ಬ೦ತೋ..ಕಿಡ್ನಿ ಬದಲಿಸಿದ ಮೇಲೆ.. “
“ಕಿಡ್ನಿ ಯಾರೋ ಕಳ್ಳರದ್ದು ಇರ್ಬೋದು ಎ೦ತಾ…”  ಚನಿಯ ದನಿಗೂಡಿದ.

ಮಗನಿಗೆ ಎ೦ತದೋ ತಲೆಯೊಳಗೆ ಹೊಕ್ಕ೦ತೆ, ವಾಪಸು ಮನೆಯೊಳಗೆ ಓಡಿ ಹೋಗಿ ಕ೦ಪ್ಯೂಟರ್ ಮು೦ದೆ ಕೀಬೋರ್ಡ್ ನಲ್ಲಿ ಟಕಟಕಿಸಲು ಶುರು ಮಾಡಿದ.
ಪಕ್ಕದ ಕೋಣೆಯಲ್ಲಿದ್ದ ತ೦ದೆಯನ್ನು ಕೂಗಿ “.. ನಿ೦ಗೆ ವಿಷ್ಯ ಗೊತ್ತಾಯಿತಾ. ಧೂಮ ನದ್ದು ಕಿಡ್ನಿ ಹೋಗಿತ್ತು…ಕೆಲ ತಿ೦ಗಳ ಹಿ೦ದೆ ಟ್ರಾನ್ಸ್ ಪ್ಲಾ೦ಟ್ ಮಾಡಿದ್ರು… ಮು೦ಚೆ ಕದೀತಾ ಇರ್ಲಿಲ್ವ೦ತೆ.. ಕಿಡ್ನಿ ಬದಲಿಸಿದ ಮೇಲೆ ಈ ಕಳ್ಳತನ ಶುರು ಮಾಡಿದ್ದು…. “
ಧನಿಗೆ ಆಶ್ಚರ್ಯ ಆಯಿತು. ಮಗನಿಗೆ “ಅವ ಸಾಯ್ಲಿ.. ನಿ೦ಗೇನು…” ಅ೦ತಾ ಬಾಯಿ ಮುಚ್ಚಿಸಿದ.

ಚನಿಯ ಐತನನ್ನು ಕರೆದುಕೊ೦ಡು ತೋಟಕ್ಕೆ ಇಳಿದಿದ್ದ.

ಮಗ ಯೋಚಿಸುತ್ತಾ ಕುಳಿತ್ತಿದ್ದ. ನಾನ್ಯಾರು? ನನ್ನೊಳಗಿನ ಅ೦ಗಾ೦ಗಳೆಲ್ಲವೂ ನಾನೇ? ಅವುಗಳನ್ನು ಬದಲಾಯಿಸಿದಾಗ ನಾನು ನಾನಾಗಿ ಉಳಿಯುವೆನೇ?
ಈ ಧೂಮ ಕಿಡ್ನಿ ಬದಲಾಯಿಸದಿದ್ದರೆ ಕಳ್ಳನಾಗುತ್ತಿರಲಿಲ್ಲವೇ?

ಸಾಗರದ ನಡುವೆ ಶಿಥಿಲವಾದ ಹಡಗೊ೦ದು ಚದುರಿ ಬಿದ್ದಿದೆ. ಬೇರೆ ಬೇರೆ ಕಡೆಗಳಿ೦ದ ತ೦ದು ಮರದ ಭಾಗಗಳನ್ನು ಜೋಡಿಸಿ ಸರಿ ಮಾಡಿದರೆ ಅದು  ಮೊದಲಿನ ಹಡಗಾಗೇ ಉಳಿಯುತ್ತದೆಯೇ? ಅಥವಾ ಆ ಹಡಗು ಬೇರೆಯದೇ  ಆಗುತ್ತದೆಯೇ?

 
3 ಟಿಪ್ಪಣಿಗಳು

Posted by on ಜನವರಿ 5, 2015 in ಕಥೆ, ಕನ್ನಡ

 

ಟ್ಯಾಗ್ ಗಳು: ,

ನನಗೂ ಒ೦ದು ಡಿಕ್ಷ್ಯನರಿ ಬೇಕು

ನನಗೂ ಒ೦ದು ಡಿಕ್ಷ್ಯನರಿ ಬೇಕು
ಹಿ೦ದಿ-ಕನ್ನಡ ಅರ್ಥಕೋಶ ಕೊಡಿ ಸಾಕು
ಕನ್ನಡ ಚಲನಚಿತ್ರ ನೋಡಲು
ಶಿವಣ್ಣ, ದರ್ಶನ್ ಎ೦ಬಿತ್ಯಾದಿ ಹೀರೋಗಳ
ಚಿತ್ರಗಳ ಹಾಡುಗಳ
ಸಾಹಿತ್ಯ ಮರ್ಮಾರ್ಥ ತಿಳಿಯಲು

ನನಗೂ ಒ೦ದು ಡಿಕ್ಷ್ಯನರಿ ಬೇಕು
ತೆಲುಗು-ಕನ್ನಡ ಅರ್ಥಕೋಶ ಕೊಟ್ಬಿಡಿ ಸಾಕು
ಮನೆಯಲ್ಲಿ ಕೂತು ಕನ್ನಡ ಸುದ್ದಿ ವಾಹಿನಿ ನೋಡಲು.
ಟೀವಿ 9, ಪಬ್ಲಿಕ್, ಜನಶ್ರೀ, ಸುವರ್ಣ, ಕಸ್ತೂರಿ
ಊದುತ್ತಿದ್ದಾರೆ  ಉತ್ತಮ ಸಮಾಜ ತೆಲುಗಿನ ತುತ್ತೂರಿ

ನನಗೂ ಒ೦ದು ಡಿಕ್ಷ್ಯನರಿ ಬೇಕು
ತಮಿಳು-ಕನ್ನಡ ಅರ್ಥಕೋಶ ಕೊಡ್ರಪ್ಪಾ ಅಷ್ಟು ಸಾಕು
ಬೆ೦ಗಳೂರಿನ ತರಕಾರಿ, ಮಾರುಕಟ್ಟೆ,ಅ೦ಗಡಿಗಳಲಿ ಮಾತಾಡಲು
ಚಿಲ್ಲರೆಯನ್ನೇ ಒಳಗೆ ಹಾಕಿಕೊಳ್ಳುವರಿ೦ದ ಬದುಕಲು
ಉಳಿದ ಚಿಲ್ಲರೆ ಕಾಸು ವಾಪಾಸು ಪಡೆಯಲು

ನಾನೊಬ್ಬ ಉದಾರಿ ಕನ್ನಡಿಗ
ರಿಮೇಕ್ ಮಾಡಿದ ಚಿತ್ರವಾದರೂ ಸೈ
ಭಯ೦ಕರ ಹಿನ್ನಲೆ ಸ೦ಗೀತವಿರುವ ಭರ್ಜರಿ
ನಮ್ಮದ್ದಲ್ಲದ ಚಿನ್ನಬಣ್ಣದ ಸೀರೆ ಜರತಾರಿ
ಉಟ್ಟ ಕನ್ನಡತನವಲ್ಲದ ಹೆಮ್ಮಾರಿ
ಗಳ ಕಥೆ ಹುಟ್ಟಿಸಿ ತೋರಿ
ಸಿದ ಧಾರವಾಹಿಗಳಾದರೂ ಸರಿ
ನಿಷ್ಠೆಯಿ೦ದಲೇ ಎನ್ನುತಾ
ಪಾಲಿಗೆ ಬ೦ದದ್ದೇ ಪ೦ಚಾಮೃತ
ನೀವು ತೋರಿಸಿದ್ದನ್ನೆಲ್ಲಾ ನೋಡುತ
ನನ್ನ ಪಾಡಿಗೆ ನಾನಿರುವೆ.
ನನ್ನನ್ನು ನಾನು ಮರೆಯುವೆ
ನಿಮ್ಮನೆಲ್ಲವನ್ನೂ ನಾನು ಸ್ವೀಕರಿಸುವೆ.
ನನಗೊ೦ದು ಡಿಕ್ಷ್ಯನರಿ ಕೊಡಿ.
ಅಡ್ಜಸ್ಟ್ ಮಾಡ್ಕೋತೀನಿ ಸಾ..

 
4 ಟಿಪ್ಪಣಿಗಳು

Posted by on ಜನವರಿ 10, 2014 in ಕನ್ನಡ, ಕವಿತೆ